ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ...

ಜ್ಞಾನ ಸಂಚಯಕ್ಕಿಂತ, ಬಳಕೆ ಮುಖ್ಯ...

ಈ ಪ್ರಪಂಚದಲ್ಲಿ ಜನರಿಗೆ ಅನೇಕ ಕಡೆಗಳಿಂದ ಜ್ಞಾನದ ಕೊಡುಗೆ ದೊರೆಯುತ್ತದೆ..
ಬಹಳ ಮಂದಿ ಸಲಹೆ, ಉಪದೇಶ, ಪ್ರವಚನಗಳನ್ನು ನೀಡುತ್ತಾರೆ. ಅನೇಕ ಗ್ರಂಥಗಳು ಮತ್ತು ಪತ್ರಿಕೆಗಳಲ್ಲಿ ಅನೇಕ ಅಮೂಲ್ಯ ತತ್ವ ಸಿದ್ಧಾಂತ ವಿಚಾರಗಳು ದೊರೆಯುತ್ತವೆ..
ಇಂತಹ ಜ್ಞಾನದ ರಾಶಿಯನ್ನು ಸಂಗ್ರಹಿಸಿದರೆ ಸಾಲದು. ಅವುಗಳನ್ನು ಅರಗಿಸಿಕೊಂಡು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯ ಕೂಡ ಇರುವುದು ಅತ್ಯವಶ್ಯಕ ಎಂಬುದನ್ನು ನಿರೂಪಿಸುವಂತಹ ಒಂದು ಪ್ರಸಂಗ ಇಲ್ಲಿದೆ..

ರಾಜಸ್ಥಾನದ ಜೈಪುರದಲ್ಲಿ ಭಾನು ಪ್ರತಾಪನೆಂಬ ಒಬ್ಬ ರಾಜನಿದ್ದನು.
ಒಮ್ಮೆ ಆತನು ಅರಮನೆ ಬಳಿಯ ಉದ್ಯಾನದಲ್ಲಿ ಅಡ್ಡಾಡುತ್ತಿದ್ದನು..
ಅಲ್ಲೊಂದು ಹಕ್ಕಿಯು ಬಳ್ಳಿಯ ಬಳಿಗೆ ಬಂದು ಸಿಹಿ-ಸಿಹಿ ದ್ರಾಕ್ಷಿಗಳನ್ನು ಆರಿಸಿ ತಿನ್ನುವುದನ್ನು, ಹುಳಿ ದ್ರಾಕ್ಷಿಗಳನ್ನು ಉದುರಿಸುವುದನ್ನೂ ಕಂಡರು..

ಅಲ್ಲಿದ್ದ ತೋಟಗಾರನು
ಹಕ್ಕಿಯನ್ನು ಹಿಡಿಯಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆಗ ಆತ ರಾಜನಿಗೇ ವರದಿ ನೀಡಿದ. ಆಗ ರಾಜನು ತಾನೇ ಆಸಕ್ತಿಯಿಂದ ಅದನ್ನು ಹಿಡಿದು ಪಾಠ ಕಲಿಸಲು ನಿಶ್ಚಯಿಸಿದ.

ಮರು ದಿನ ರಾಜನು ತೋಟದಲ್ಲಿ ಆ ಬಳ್ಳಿಯ ಮರೆಯಲ್ಲಿ ಅಡಗಿ ಕುಳಿತನು ಮತ್ತು ಆ ಹಕ್ಕಿ ದ್ರಾಕ್ಷಿಯ ಬಳಿಗೆ ಬಂದಾಗ ಅದರ ಕುತ್ತಿಗೆಯನ್ನು ಬಲವಾಗಿ ಹಿಡಿದುಕೊಂಡನು..
ಅದರ ಕುತ್ತಿಗೆ ಹಿಚುಕುವ ಮೊದಲೇ ಆ ಹಕ್ಕಿಯು ಹೇಳಿತು- ''ಹೇ ರಾಜನ್‌, ನಾನು ನಿಮಗೆ ಜ್ಞಾನದ ನಾಲ್ಕು ಮುಖ್ಯ ವಿಷಯಗಳನ್ನು ಹೇಳುತ್ತೇನೆ. ನನ್ನನ್ನು ಕೊಲ್ಲಬೇಡಿ..'' 

ರಾಜ ನುಡಿದನು- ''ಆಗಲಿ ಬೇಗ ಹೇಳು..''

ಹಕ್ಕಿ ಹೇಳಿತು- ''ಮೊದಲನೆಯದಾಗಿ ಕೈಗೆ ಬಂದ ಶತ್ರುವನ್ನು ಎಂದೂ ಬಿಡಬೇಡ..'' 

ರಾಜ ಕೇಳಿದ- ''ಸರಿ, ಎರಡನೇ ಸಂಗತಿ?'' 

ಹಕ್ಕಿ ನುಡಿಯಿತು- 'ಅಸಂಭವ ವಿಷಯವನ್ನು ನಂಬಬೇಡ..
ಮೂರನೇ ಸಂಗತಿಯೆಂದರೆ ಕಳೆದ ವಿಷಯಗಳ ಬಗ್ಗೆ ಪಶ್ಚಾತ್ತಾಪ ಬೇಡ..'' 

ಆಗ ರಾಜ ಪ್ರಶ್ನಿಸಿದ- ''ಸರಿ ನಾಲ್ಕನೇ ವಿಷಯವೇನು?'' 

ಆಗ ಹಕ್ಕಿ ಹೇಳಿತು- ''ಇದು ಬಹಳ ಗೂಢವೂ, ರಹಸ್ಯಪೂರ್ಣವೂ ಆಗಿದೆ..
ನನಗೆ ಉಸಿರು ಗಟ್ಟಿದಂತಾಗಿದೆ. ನನ್ನ ಕುತ್ತಿಗೆ ಸ್ವಲ್ಪ ಸಡಿಲ ಮಾಡಿರಿ..''

ರಾಜನು ಹಕ್ಕಿಯ ಮಾತು ನಂಬಿ ಕೈ ಸಡಿಲ ಮಾಡಿದ..

ಆಗ ಹಕ್ಕಿ 'ಬದುಕಿದೆಯಾ ಬಡ ಜೀವಾ' ಎಂದು ಹಾರಿ ಒಂದು ಕೊಂಬೆಯ ಮೇಲೆ ಕುಳಿತಿತು. 


ರಾಜನು ಅಚ್ಚರಿಯಿಂದ ನೋಡಿದ..
ಆಗ ಹಕ್ಕಿ ನುಡಿಯಿತು- ''ಹೇ ರಾಜನ್‌, ನಾಲ್ಕನೆ ಸಂಗತಿಯೇನೆಂದರೆ, ಜ್ಞಾನದ ಮಾತು ಕೇಳಿ, ಓದಿದರೆ ಏನೇನೋ ಫಲವಿಲ್ಲ..
ಆಚರಣೆಗೆ ತರುವುದು ಮುಖ್ಯ. ನಾನು ನಿಮ್ಮ ಬಳಿ ಬಂದಾಗ ನನ್ನನ್ನು ಹಿಡಿದಿರಿ. ನನ್ನ ಸವಿಸವಿ ಮಾತುಗಳನ್ನು ನಂಬಿ ನನ್ನನ್ನು ಬಿಟ್ಟು ಬಿಟ್ಟಿರಿ. ಪಡೆದ ಜ್ಞಾನವನ್ನು ಬಳಸಿಕೊಳ್ಳಲಿಲ್ಲ..'' ಎಂದು ನುಡಿದ ಹಕ್ಕಿ ಹಾರಿ ಹೋಯಿತು..
ನಾಚಿಕೊಂಡ ರಾಜನು ಸುಸ್ತಾಗಿ ಬಿಟ್ಟ...

ಇಡೀ ವಿಶ್ವಕ್ಕೇ ಇಲ್ಲೊಂದು ಅಮೂಲ್ಯ ಸಂದೇಶವಿದೆ-'ಜ್ಞಾನವನ್ನು ಸಂಗ್ರಹಿಸಲು ಪರಿಶ್ರಮ ವಹಿಸಿದರೆ ಸಾಲದು. ಸಂಗ್ರಹಿಸಿದ ಜ್ಞಾನವನ್ನು ಸೂಕ್ತ ಕಾಲದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಚಾತುರ್ಯವೂ ನಮ್ಮಲ್ಲಿರಬೇಕು..

Comments

Popular Posts