ನಿಷ್ಠೆಯ ದುಡಿಮೆಯ ಮಹತ್ವ...*

*ನಿಷ್ಠೆಯ ದುಡಿಮೆಯ ಮಹತ್ವ...*

ದೊಂಬರಾಟದ ಹುಡುಗ ಡೋಲಿನ ಶಬ್ದಕ್ಕೆ ಎತ್ತೆತ್ತರಕ್ಕೆ ಜಿಗಿಯಬಲ್ಲವನಾಗಿದ್ದ!

ಒಮ್ಮೆ ಬೀದಿಯಲ್ಲಿ ಅವನ ಪ್ರದರ್ಶನ ನಡೆಯುವಾಗ, ಅದನ್ನು ಕಂಡ ಕಳ್ಳನೊಬ್ಬನ ಮನಸ್ಸಿನಲ್ಲಿ ಧುತ್ತನೆ ಉಪಾಯವೊಂದು ಸ್ಪುರಿಸಿತು. ಈತನ ಸಾಮರ್ಥ್ಯವನ್ನು ತಾನು ಸಮರ್ಥವಾಗಿ ಬಳಸಿಕೊಂಡರೆ ಮಹಡಿಯ ಮೇಲೆ ಮಹಡಿ ಕಟ್ಟಿರುವ ಶ್ರೀಮಂತರ ಮನೆಗಳಿಗೆ ಸುಲಭವಾಗಿ ಲಗ್ಗೆಹಾಕಬಹುದು, ಹೆಚ್ಚೆಚ್ಚು ಲೂಟಿ ಹೊಡೆಯಬಹುದು; ಶ್ರೀಮಂತರು ಮನೆಯಲ್ಲಿ ಇಲ್ಲದ ವೇಳೆ ಈ ಹುಡುಗ ಹೊರಗಡೆಯಿಂದ ಒಂದೇ ಬಾರಿಗೆ ಗೋಡೆಯ ಮೇಲೆ ಜಿಗಿದು ಒಳಗಿಳಿದು ಚಿಲಕ ತೆಗೆದರೆ, ಮುಂದಿನ ಕೆಲಸ ತನಗೆ ಸುಲಭವಾಗುತ್ತದೆ ಎಂದು ಆ ಕಳ್ಳ ಯೋಜಿಸಿದ.

ಅಂತೆಯೇ, ಆಟ ಮುಗಿಯುತ್ತಿದ್ದಂತೆ ಆ ಹುಡುಗನನ್ನು ಭೇಟಿಯಾಗಿ ತನ್ನ ಉಪಾಯವನ್ನು ಅರುಹಿದ. ಶ್ರೀಮಂತಿಕೆಯ ಪ್ರಲೋಭನೆಗೆ ಒಳಗಾದ ಹುಡುಗ ಅದಕ್ಕೆ ಸಮ್ಮತಿಸಿದ..

ಊರಿನ ಅನುಕೂಲಸ್ಥರೊಬ್ಬರ ಮನೆಯನ್ನು ಅಂದು ರಾತ್ರಿ ದೋಚುವುದೆಂದು ತೀರ್ವನವಾಯಿತು.
ಅಂತೆಯೇ ಅಲ್ಲಿಗೆ ಹುಡುಗನೊಂದಿಗೆ ಬಂದ ಕಳ್ಳ, ‘ಬೇಗ ಗೋಡೆಯ ಮೇಲೆ ಜಿಗಿದು ಒಳಗಿನಿಂದ ಚಿಲಕ ತೆಗೆ’ ಎಂದು ಆತನ ಕಿವಿಯಲ್ಲಿ ಪಿಸುಗುಟ್ಟಿದ.

ಅದಕ್ಕಾತ, ‘ಜಿಗಿಯುತ್ತೇನೆ, ನೀನು ಮೊದಲು ಡೋಲು ಬಾರಿಸು’ ಎಂದ ಮೆಲುದನಿಯಲ್ಲಿ.

ಈ ಹುಡುಗನಿಗೆ ಲಾಗ ಹೊಡೆಯಲು ಪ್ರೇರೇಪಿಸುತ್ತಿದ್ದ ಸಂಗತಿ ಯಾವುದು ಎಂದು ಕಳ್ಳನಿಗೆ ಗೊತ್ತಾಗಿದ್ದು ಆಗಲೇ..!
ಉಪಾಯ ವಿಫಲಗೊಂಡಿದ್ದಕ್ಕೆ ಕಳ್ಳ ನಿರಾಶೆಯಿಂದ ಹಿಂದಿರುಗಿದ..


ಕಳ್ಳ ಮತ್ತು ಕಳ್ಳತನ ಇಲ್ಲಿ ನಿಮಿತ್ತ ಮಾತ್ರ. ನಮ್ಮಲ್ಲಿ ಬಹುತೇಕರ ಸ್ಥಿತಿ ಈ ಹುಡುಗನಂತೆಯೇ- ಅದೇ ಪ್ರೇರಣೆಗಾಗಿ ಕಾಯುವುದು...

ನಿಯೋಜಿತ ಕೆಲಸವನ್ನು ಮನಸ್ಸಿಟ್ಟು ಮಾಡಿದರೆ, ಅದರಲ್ಲಿ ರುಚಿ ಸಿಗುವುದು ನಿಶ್ಚಿತ. ಆಗ ಅದೇ ಪ್ರೇರಣಾದಾಯಿ ಆಗಬಲ್ಲದು. ಭಗವದ್ಗೀತೆಯಲ್ಲಿ
*‘ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ’* ಎಂಬುದೊಂದು ಸೂಕ್ತಿಯಿದೆ. ಅಂದರೆ, ತಮ್ಮ ತಮ್ಮ ಸ್ವಾಭಾವಿಕ ಕೆಲಸಗಳಲ್ಲಿ ತತ್ಪರತೆಯಿಂದ ತೊಡಗಿರುವವರು ಪರಮಸಿದ್ಧಿ ಪಡೆಯುತ್ತಾರೆ ಎಂದರ್ಥ. ಕಾರ್ಯಸಾಧನೆಗೆ ನಿಷ್ಠೆ ಮತ್ತು ಪರಿಶ್ರಮದ ದುಡಿತವೇ ಮಾಗೋಪಾಯ; ವಾಮಮಾರ್ಗದಿಂದ ದಕ್ಕಿಸಿಕೊಂಡಿದ್ದು ಬಹುಕಾಲ ಬಾಳುವುದಿಲ್ಲ ಎಂಬುದನ್ನು ಮರೆಯದಿರೋಣ...

Good morning...
*SAVE TREES*🌳🌳🌳🌳🌳

Comments

Popular Posts